ಬೆಂಗಳೂರು ಆಗಸ್ಟ್ 10: ನಕಲಿ ಸರ್ಟಿಫಿಕೇಟ್ ರಾಜನಿಗೆ, ಶೂರನಿಗೆ ನಾನು ಎಲ್ಲಿಯೂ ಕಾಣಿಸಿಲ್ಲವಂತೆ. ಕಣ್ಣಿಗೆ ಕಾಮಾಲೆ ಬಂದಿರಬೇಕು ಇಲ್ಲವೇ ಜಾಣ ಕುರುಡುತನ ಇರಬೇಕು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸರಣಿ ಟ್ವಿಟ್ ಮಾಡಿರುವ ಎಚ್.ಡಿ.ಕುಮಾರಸ್ವಾಮಿ ಅವರು, ನಾನು ಕರಾವಳಿಯಲ್ಲಿನ ಸರಣಿ ಕೊಲೆಗಳು, ಮಳೆ, ಪ್ರವಾಹ ಕುರಿತು ಚರ್ಚೆಗಾಗಿ ಅಧಿವೇಶನ ಕರೆಯಬೇಕು ಎಂದು ಒತ್ತಾಯಿಸಿದ್ದೇವೆ. ಅಷ್ಟಕ್ಕೆ ಅಶ್ವತ್ಥ ನಾರಾಯಣ್ ನನ್ನು ಹುಡುಕುತ್ತಿದ್ದಾರಂತೆ. ನಾನು ಸದನದಲ್ಲಿ ಮತ್ತು ರಾಮನಗರದಲ್ಲೂ ಕಂಡಿಲ್ಲವಂತೆ. ಎಲ್ಲಿದ್ಯಪ್ಪ ಕುಮಾರಸ್ವಾಮಿ?
ಎಂದು ಕೇಳಿದ್ದಾರೆ. ಅವರ ಕಣ್ಣಿಗೆ ಕಾಮಾಲೆ ಬಂದಿರಬೇಕು ನೋಡಿಕೊಳ್ಳಲಿ. ನಾನು ವಿರೋಧ ಪಕ್ಷದವನು. ನಾನು ಅಧಿವೇಶನ ಕರೆದರೆ ಉನ್ನತ ಶಿಕ್ಷಣ ಸಚಿವರಿಗೇಕೆ ಉರಿ. ಎಲ್ಲಿ ಅವರ ಇಲಾಖೆಯ ಹುಳುಕು ಹೊರ ಬಂದಾವೆ ಎಂಬ ಭಯವೇ?
ನನ್ನಲ್ಲಿರುವ ದಾಖಲೆ ತೆರೆದರೆ ಅವೇ ಅವರ ಇಲಾಖೆಯ ಹುಳುಕುಗಳ ಹಲವು ಅಧ್ಯಾಯಗಳೇ ಆಗಲಿವೆ ಎಂದು. ಅಶ್ವತ್ಥ ನಾರಾಯಣ್ ನಕಲಿ ಸಟೀಫಿಕೇಟ್ ರಾಜ, ಶೂರ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ. ಕೋಟಿಗಟ್ಟಲೆ ಹಣ ಶಾಸಕರ ಮನೆಯಲ್ಲಿಟ್ಟ ಉನ್ನತ ಮಂತ್ರಿ ಕಲಾಪವೆಂದರೆ ಮೈ ಬೆಚ್ಚಗಾಗುತ್ತಾ ಉನ್ನತ ಶಿಕ್ಷಣ ಸಚಿವರೇ? ನಿಮ್ಮ ಕೌಶಲ್ಯ ಗೊತ್ತಿದೆ. ಅಕ್ರಮ ಮುಚ್ಚಿಕೊಳ್ಳಲು ಅಕ್ರಮದ ದಾಖಲೆಗಳಿದ್ದ ಬಿಬಿಎಂಪಿ ಕಟ್ಟಡಕ್ಕೇ ಬೆಂಕಿ ಹಾಕಿಸಿದ್ದು, ಆಪರೇಷನ್ ಕಮಲದಲ್ಲೂ ತಮ್ಮ ಕುಶಲತೆ?.
ಕೋಟಿ ಕೋಟಿ ಹಣ ತುಂಬಿಸಿಕೊಂಡು ಹೋಗಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದಕ್ಕೆ ತಾವು ಕೌಶಲ್ಯ ಮಂತ್ರಿ ಆಗಿದ್ದೀರಾ?. ಅಧಿವೇಶನಕ್ಕೆ ಆಗ್ರಹಿಸುವುದು ವಿರೋಧ ಪಕ್ಷದವನಾಗಿರುವ ನನ್ನ ಹಕ್ಕು. ಸದನದಲ್ಲಿ ಉತ್ತರಿಸುವ ಯೋಗ್ಯತೆ ಇದ್ದರೆ ಹಾರಿಕೆ ಉತ್ತರಗಳ ಮೂಲಕ ಜಾರಿಕೊಳ್ಳುವ ಯತ್ನವೇಕೆ?. ಕಲಾಪದಲ್ಲಿ ನನ್ನ ಮೌಲಿಕ ಪಾಲ್ಗೊಳ್ಳುವಿಕೆ ಎಷ್ಟು? ನಿಮ್ಮದೆಷ್ಟು?
ತುಲನೆ ಮಾಡಿಕೊಳ್ಳಿ. ಕಾಮಾಲೆ ಕಣ್ಣುಗಳ ಪೊರೆ ತೆಗೆದು ನೋಡಿ ಎಂದು ಕುಮಾರಸ್ವಾಮಿ ಟ್ವೀಟ್ ಮೂಲಕ ಅಶ್ವತ್ಥ ನಾರಾಯಣ್ರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಹಿರಂಗ ಚರ್ಚೆ ಬರಲು ಎಚ್ಡಿಕೆ ಸವಾಲ್ ನಮ್ಮ ಸರ್ಕಾರವನ್ನು ಕೆಡವಲು ಸಮಾಜಘಾತುಕ ಶಕ್ತಿಗಳ ಜತೆ ಕೈ ಮಿಲಾಯಿಸಿದ್ದು, ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಜತೆ ಶಾಮೀಲಾಗಿದ್ದು, ಹಣದ ಹೊಳೆ ಹರಿಸಿರುವ ವಿಷಯಗಳೆಲ್ಲವು ಗೊತ್ತಿದೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ. ಬೇಕಿದ್ದರೆ ಎಲ್ಲವನ್ನು ಬಿಚ್ಚಿಡುತ್ತೇನೆ ಎಂದು ಅವರು ಹೇಳಿದ್ದಾರೆ. ಬಾಲಕಿ ಸಾವಿನ ಪಾಪಪ್ರಜ್ಞೆ ನಿಮ್ಮಲ್ಲಿಲ್ಲ ನೀವು ಮಾಡಿರುವ ಪಠ್ಯ ಪರಿಷ್ಕರಣೆಯಲ್ಲಿ ದಾದಿಯರ ನಕಲಿ ಸರ್ಟಿಫಿಕೇಟ್ ಸೃಷ್ಟಿಸುವುದು ಹೇಗೆ?. ಆಪರೇಷನ್ ಕಮಲ ಹೇಗೆ ಮಾಡಬೇಕು. ಕದ್ದುಮುಚ್ಚಿ ಹಣ ಸಾಗಿಸಿ ಶಾಸಕರ ಮನೆಗಳಲ್ಲಿ ಇಟ್ಟು ಬರುವುದು ಹೇಗೆ?. ಇದೆಲ್ಲವನ್ನು ಪಠ್ಯದಲ್ಲಿ ಸೇರಿಸಿದ್ದಿದ್ದರೆ ಮುಂದಿನ ಯುವಜನರಿಗೂ ನಿಮ್ಮಂತೆಯೇ ಆಗುವ ಭಾಗ್ಯ ಸಿಗುತ್ತಿತ್ತು? ಅಲ್ಲವೇ ಆಪರೇಷನ್ ಅಶ್ವತ್ಥನಾರಾಯಣ್. ಕಾಲು ಸುಂಕದ ರಸ್ತೆ ಕುಸಿದು ಏಳು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ನಿಮಗೆ ಕನಿಷ್ಠ ಪಾಪಪ್ರಜ್ಞೆಯೂ ಇಲ್ಲವಲ್ಲ. ಆಕಾಶದಲ್ಲಿ ಹಾರಾಡುವ ನಿಮಗೆ ಕಾಲು ಸುಂಕದ ಕಷ್ಟ ಅರ್ಥವಾದೀತೆ. ನಿರಂತರ ಮಳೆ, ನೆರೆಯಿಂದ ಕರ್ನಾಟಕವೇ ಕಣ್ಣೀರ ಕಡಲಾಗಿರುವುದು ಕಾಣುತ್ತಿಲ್ಲವೇ ಎಂದು ಕುಮಾರಸ್ವಾಮಿ ವಾವ್ದಾಳಿ ನಡೆಸಿದ್ದಾರೆ.
3ವರ್ಷದಲ್ಲಿ ಎಷ್ಟು ಸೇತುವೆ ನಿರ್ಮಿಸಿದ್ಧೀರಿ? ನಾನು ಎರಡನೇ ಸಲ ಸಿಎಂ ಆದಾಗ 800 ಕಾಲು ಸುಂಕ ಸೇತುವೆಗಳ ನಿರ್ಮಾಣಕ್ಕೆ ಆದೇಶ ಮಾಡಲಾಗಿತ್ತು. ಅವುಗಳಲ್ಲಿ ಎಷ್ಟು ಪೂರ್ಣಗೊಳಿಸಲಾಗಿದೆ?. ಮೂರು ವರ್ಷಗಳ ನಿಮ್ಮ ಸರ್ಕಾರದಲ್ಲಿ ಇಂಥಾ ಎಷ್ಟು ಸೇತುವೆ ನಿರ್ಮಿಸಲಾಗಿದೆ?. ಒಂದು ಮುಗ್ಧ ಸಾವು ನಿಮ್ಮ ಮನ ಕಲಕುತ್ತಿಲ್ಲವಲ್ಲಾ, ನಿಮಗೆ ನಾಚಿಕೆ ಆಗಬೇಕು ಎಂದು ಅಶ್ವತ್ಥ ನಾರಾಯಣ್ ವಿರುದ್ಧ ಪ್ರಶ್ನಿಸಿದ್ದಾರೆ. ಆಪರೇಷನ್ ಕಮಲ ಮಾಡಿದ್ದಕ್ಕೆ ದಕ್ಷಿಣಿ ಎಂಬಂತೆ ತಾವು ಉಪ ಮಖ್ಯಮಂತ್ರಿ ಸ್ಥಾನ ಪಡೆದದ್ದು, ನಂತರ ಅದೂ ಹೋಗಿ ಕೊನೆಗೆ ಉನ್ನತ ಶಿಕ್ಷಣ ಮಂತ್ರಿಗಿರಿಯಷ್ಟೇ ಉಳಿದದ್ದು, ಬೊಮ್ಮಾಯಿ ಸಂಪುಟ ಸೇರ್ಪಡೆ ಆದ್ಯತಾ ಪಟ್ಟಿಯಲ್ಲಿ ತಾವೆಷ್ಟು ದೂರ ಇದ್ದೀರಿ ಎನ್ನುವುದು ಗೊತ್ತಿದೆ. ಆಗೇಕೆ ತಾವು ‘ಠಮ ಠಮ ಠಮ’ ಸದ್ದು ಮಾಡಲಿಲ್ಲ? ಆಗ ಎಲ್ಲಿದ್ಯಪ್ಪ ಅಶ್ವತ್ಥನಾರಾಯಣ ಎಂದು ವ್ಯಂಗ್ಯವಾಡಿದರು. 2ತಲೆಯ ಕೌಶಲ್ಯವನ್ನು ಆರ್ಎಸ್ಎಸ್ ಕಲಿಸಿತೇ? ಜೆಡಿಎಸ್ ಕಂಪನಿ ಎನ್ನುವ ನೀವು, ನಿಮ್ಮ ಕಂಪನಿಗಳ ಕಥೆ ಏನೆಂದು ಬಿಚ್ಚಿಡಬೇಕೆ?. ನಿಮ್ಮದು ಹೊರಗೆ ಸಾಚಾತನ, ಒಳಗೆ ಸೋಗಲಾಡಿತನ. ಎರಡು ತಲೆಯ ಕುಶಲತೆಯನ್ನು ಸರಿಯಾಗೇ ಕಲಿತಿದ್ದಿರಾ. ಸಂಘದಿಂದ ಬಂದ ಸಂಸ್ಕಾರವೇ ಅಥವಾ ತಮ್ಮ ಹಿನ್ನೆಲೆಯೇ ಹೀಗೆ ಇದೆಯೇ?. ಜೆಡಿಎಸ್ ಕಂಪನಿ ವಿಚಾರ ಒಂದೆಡೆ ಇರಲಿ. ನಿಮ್ಮ ಕಂಪನಿಗಳ ಬಗ್ಗೆಯೇ ಕುಮಾರಸ್ವಾಮಿಗೆ ಚೆನ್ನಾಗಿಯೇ ಗೊತ್ತಿದೆ ಎಂಬುದು ಸದಾ ನೆನಪಿನಲ್ಲಿಡಿ. ಚುನಾವಣೆ ಬರಲಿ, ಕಂಪನಿಗಳ ಕಲರವ ಮತ್ತು ʼಠಮ ಠಮ ಠಮʼ ಸದ್ದು ಏನೆಂಬುದನ್ನು ರಾಮನಗರದಲ್ಲಿ ಕೇಳುವಂತೆ ಮಾಡುತ್ತೇನೆ ಎಂದು ಹೇಳಿದರು. ಪಿಎಸ್ಐ ಅಕ್ರಮ, ಪ್ರಾಧ್ಯಾಪಕರ ಕರ್ಮಕಾಂಡ, ಕಟ್ಟಡಗಳ ಹೆಸರಿನಲ್ಲಿ ಕಮೀಷನ್ ಕಾಂಚಾಣ, ಅಧಿಕಾರಿಗಳನ್ನು ಒಳಕ್ಕೆ ಹಾಕಿಕೊಂಡು ಡೀಲ್ ಮಾಡುವ ಅಶ್ವತ್ಥನಾರಾಯಣರು ಇನ್ನೆಂಥ ಉನ್ನತ ಶಿಕ್ಷಣ ನೀಡುತ್ತಿದ್ದಾರೆ. ಇದೇನಾ ಸಂಘ ನಿಮಗೆ ಕಲಿಸಿದ ಶಿಕ್ಷಣ?. ಇದಕ್ಕೆ ಉತ್ತರ ಕೊಡಿ ಡೀಲ್ ಅಶ್ವತ್ಥ ನಾರಾಯಣ್ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.